ಲಾಲಮಹ್ಮದ್ ಬಂದೇನವಾಜ ಖಲೀಫ್ ಅಲ್ದಾಳ
-ಮಾಣಿಕ ಆರ್.ಭುರೆ
`ಅದೇನು ಮಾಯೆಯೋ, ಅದೇನು ಮೋಹವೋ, ಅದೆಂಥ ಭಕ್ತಿಯೋ, ಅದ್ಯಾವ ಶಕ್ತಿಯೋ... ' ಎನ್ನುವ ಮಾತಿನಂತೆ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದ ಹಿರೇಮಠದಲ್ಲಿ ಅಂಥದ್ದೇನಿದೆಯೋ ಏನೋ, ಏಕೆಂದರೆ ಇಲ್ಲಿಗೆ ಒಮ್ಮೆ ಆಗಮಿಸಿದವರು ಪದೇ ಪದೇ ಬರುತ್ತಾರೆ. ಏನ್ಮಾಡೋದು ಹಾರಕೂಡ ಮಠ ಒಮ್ಮೆ ಹಿಡಿಯಿತೆಂದರೆ ಬಿಡುವುದಿಲ್ಲ ಎನ್ನುತ್ತಾರೆ. ಇಲ್ಲಿ ವರ್ಷದಲ್ಲಿ ಎರಡು ಸಲ ನಡೆಯುವ ಕಾರ್ಯಕ್ರಮಗಳಿಗಂತೂ ಯಾರೂ ತಪ್ಪಿಸಿಕೊಳ್ಳುವುದಿಲ್ಲ. ಸಾಹಿತಿ, ಸಂಗೀತಗಾರರು, ರಾಜಕೀಯ ಮುಖಂಡರು, ಕಲಾವಿದರು, ಗಣ್ಯರು ಪದೇ ಪದೇ ಹಾಜರಿ ಹಾಕುತ್ತಾರೆ.
ಸಾಹಿತಿ, ಭಾಷಾವಿಜ್ಞಾನಿ, ಸಂಶೋಧಕರಾದ ಡಾ. ಸಂಗಮೇಶ ಸವದತ್ತಿಮಠ ಅವರು ಪಾಲ್ಗೊಳ್ಳದೆ ಇಲ್ಲಿ ಒಂದೂ ಕಾರ್ಯಕ್ರಮ ನಡೆದಿಲ್ಲ ಎನ್ನಬಹುದು. ನಾಟಕಕಾರ ಲಾಲಮಹ್ಮದ್ ಬಂದೇನವಾಜ ಖಲೀಫ್ ಅಲ್ದಾಳ (ಎಲ್ಬಿಕೆ ಅಲ್ದಾಳ) ಸಹ ಈ ಮಠದ ನಂಟು ಬೆಳೆಸಿಕೊಂಡವರಲ್ಲಿ ಪ್ರಮುಖರು. ಹಾಗೆ ನೋಡಿದರೆ, ಇಂಥವರು ಬರೀ ಇಲ್ಲಿಗೆ ಬಂದು ಹೋಗುವುದಿಲ್ಲ. ಇಲ್ಲಿನ ವಿವಿಧ ಸಾಂಸ್ಕøತಿಕ, ಸಾಹಿತ್ಯಕ ಚಟುವಟಿಕೆಗಳಲ್ಲಿ, ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾರೆ.
ಡಾ.ಸಂಗಮೇಶ ಸವದತ್ತಿಮಠ ಅವರು ಇಲ್ಲಿ ದಸರಾ ಹಬ್ಬದಂದು ನಡೆಯುವ ಲಿಂ.ಗುರುಲಿಂಗ ಶಿವಾಚಾರ್ಯರ ಪುಣ್ಯತಿಥಿಗೆ ಉಪನ್ಯಾಸ ಮಾಲೆ ನಡೆಯುವಲ್ಲಿ ಮತ್ತು ಗ್ರಂಥಗಳನ್ನು ಪ್ರಕಟಿಸುವ ಕಾರ್ಯದಲ್ಲಿ ನಿರಂತರವಾಗಿ ಸಹಕರಿಸುತ್ತ ಬಂದಿದ್ದಾರೆ. ಎಲ್ಬಿಕೆ ಅಲ್ದಾಳರು ಡಿಸೆಂಬರ್-ಜನವರಿಯಲ್ಲಿ ನಡೆಯುವ ಲಿಂ.ಚೆನ್ನಬಸವ ಶಿವಯೋಗಿಗಳ ಜಾತ್ರೆಯಲ್ಲಿ ನಾಟಕ ಆಡುತ್ತಾರೆ. ಶಿವಯೋಗಿಗಳ ಕುರಿತು ನಾಟಕ ಬರೆದಿದ್ದಾರೆ.
ಹಾರಕೂಡ ಮಠವೂ ಇವರ ಸೇವೆಯನ್ನು ನಿರ್ಲಕ್ಷಿಸಿಲ್ಲ. ಮಠದಿಂದ 2011 ರಲ್ಲಿ ಆರಂಭಿಸಲಾದ `ಚೆನ್ನರೇಣುಕಬಸವ' ಎಂಬ ಮಹತ್ವದ ಪ್ರಶಸ್ತಿ ಕೊಡುವಾಗ ಪ್ರಥಮವಾಗಿ ಡಾ.ಸಂಗಮೇಶ ಸವದತ್ತಿಮಠ ಅವರನ್ನು ಪ್ರಶಸ್ತಿಗೆ ಪರಿಗಣಿಸಿದರೆ, ಎರಡನೇ ವರ್ಷದ ಪ್ರಶಸ್ತಿ ಅಲ್ದಾಳ ಅವರಿಗೆ ಕೊಡಲಾಗಿದೆ. ಇದಕ್ಕೂ ಮೊದಲು ಅಲ್ದಾಳ ಅವರ ಬಗ್ಗೆ ಅಭಿನಂದನಾ ಗ್ರಂಥ ಪ್ರಕಟಿಸಲಾಗಿದೆ.
ಹೀಗೆ ಪ್ರತಿಭೆ, ನಿಷ್ಕಲ್ಮಷ ಭಕ್ತಿ ಮತ್ತು ಸೇವಾ ಮನೋಭಾವನೆಗೆ ಮಠಾಧಿಪತಿ ಚೆನ್ನವೀರ ಶಿವಾಚಾರ್ಯರು ಯಾವಾಗಲೂ ಮನ್ನಣೆ ಕೊಡುವ ಗುಣವೇ ಎಲ್ಲರನ್ನೂ ಇಲ್ಲಿಗೆ ಎಳೆದು ತರುತ್ತದೆ ಎಂದರೆ ತಪ್ಪಾಗಲಾರದು.
ಲಾಲಮಹ್ಮದ್ ಬಂದೇನವಾಜ ಖಲೀಫ್ ಅಲ್ದಾಳ |
ಲಿಂ.ಚೆನ್ನಬಸವ ಶಿವಯೋಗಿಗಳು ಸಹ ಯಾವುದೇ ಧರ್ಮ, ಜಾತಿ ನೋಡದೆ ಕಲಾವಿದರಿಗೆ ಮತ್ತು ತತ್ವಪದಕಾರರಿಗೆ ಪ್ರೋತ್ಸಾಹಿಸುತ್ತಿದ್ದರು. ಇಂದಿನ ಪೀಠಾಧಿಪತಿ ಸಹ ಆ ಸತ್ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. 2012 ನೇ ಸಾಲಿನ `ಚೆನ್ನರೇಣುಕಬಸವ' ಪ್ರಶಸ್ತಿಯನ್ನು ಅಕ್ಟೋಬರ್ 23 ರಂದು ಅಲ್ದಾಳ ಅವರಿಗೆ ಪ್ರದಾನ ಮಾಡಲಾಯಿತು. 25 ಸಾವಿರ ರೂಪಾಯಿ ನಗದು, 10 ಗ್ರಾಂ ಚಿನ್ನದ ಪದಕ ಮತ್ತು ಪ್ರಶಸ್ತಿ ಫಲಕವನ್ನು ಕೊಟ್ಟು ಸನ್ಮಾನಿಸಲಾಯಿತು.
ಪರಿಚಯ: `ಚೆನ್ನರೇಣುಕಬಸವ' ಪ್ರಶಸ್ತಿ ಪಡೆದ ಎಲ್ಬಿಕೆ ಅಲ್ದಾಳರು ಮೂಲತಃ ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದವರು. ಆದರೆ, ಚಿಕ್ಕಂದಿನಲ್ಲಿಯೇ ತಂದೆ ಮೃತಪಟ್ಟಿದ್ದರಿಂದ ಅವರು ತನ್ನ ತಾಯಿಯ ತವರೂರಾದ ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಳ್ಳಿ ಗ್ರಾಮಕ್ಕೆ ಬಂದು ನೆಲೆಸಿದರು. ಈ ಊರನ್ನೇ ತನ್ನ ಕಾರ್ಯಕ್ಷೇತ್ರವನ್ನಾಗಿಸಿದರು.
ಚಿಕ್ಕಂದಿನಿಂದಲೇ ನಾಟಕದಲ್ಲಿ ಪಾತ್ರ ಮಾಡುವ ಗೀಳು ಹಚ್ಚಿಕೊಂಡ ಅಲ್ದಾಳರು ಮುಂದೆ ತಾವೇ ಸ್ವತಃ ನಾಟಕ ರಚಿಸಿ ಆಡ ತೊಡಗಿದರು. ಅವರು ಇದುವರೆಗೆ `ಹಾರಕೂಡ ಶ್ರೀ ಚೆನ್ನಬಸವ ಶಿವಯೋಗಿ ಮಹಾತ್ಮೆ' `ಜೇವರ್ಗಿಯ ಜ್ಯೋತಿ ಷಣ್ಮುಖ ಶಿವಯೋಗಿ' `ಅಳ್ಳಳ್ಳಿಯ ಅಯ್ಯಪ್ಪ ಮಹಾತ್ಮೆ' `ಪತಿಭಕ್ತಿ' `ಕಲಿಯುಗದ ಕನ್ಯೆ' `ನಮಸ್ಕಾರ' `ಬಾಳಿಗೊಂದು ಬೆಲೆ ಬೇಕು' `ವಂಚಕ' ಮುಂತಾದ ಸಾಮಾಜಿಕ ಮತ್ತು ಶರಣರಿಗೆ ಸಂಬಂಧಿಸಿದ ನಾಟಕಗಳನ್ನು ರಚಿಸಿದ್ದಾರೆ. ಬಣ್ಣ ಹಚ್ಚಿಕೊಂಡು ಪಾತ್ರದಲ್ಲಿ ತನ್ಮಯರಾಗಿ ನಾಟಕ ಆಡಿದ್ದಾರೆ. ತಗಡಿನ ಮನೆಯಲ್ಲಿಯೇ ವಾಸಿಸುವಷ್ಟು ಬಡತನ
ಮನೆಯಲ್ಲಿದ್ದರೂ ತಮ್ಮ ಹವ್ಯಾಸವನ್ನು ಬಿಟ್ಟವರಲ್ಲ. ಮಠ- ಮಾನ್ಯಗಳ ಮತ್ತು ರಸಿಕರು ತೋರಿಸಿದ ಪ್ರೇಮ, ಗೌರವಕ್ಕೆ ಸದಾ ತಲೆಬಾಗಿ ನಿಂತವರು.
ಇವರಿಗೆ ಸಂಘ ಸಂಸ್ಥೆಯವರು ಮತ್ತು ವಿವಿಧೆಡೆಯ ಮಠಗಳಿಂದ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಗಿದೆ. ಜತೆಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಗುಬ್ಬಿ ವೀರಣ್ಣ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಗಿದೆ.
ಗೌರವ: ಹಾರಕೂಡ ಹಿರೇಮಠದಿಂದ ಇದುವರೆಗೆ ಸಾಹಿತಿಗಳಾದ ಶರಣಯ್ಯ ಪುರಾಣಿಕ, ಸೂಗಯ್ಯ ಹಿರೇಮಠ, ವಿ.ಎಸ್.ಚರಂತಿಮಠ, ಡಾ.ಎಂ.ಎಸ್.ಲಠ್ಠೆ, ಎಸ್.ಆರ್.ಗುಂಜಾಳ, ಶಿವರಾಜ ಪಾಟೀಲ ಕಲ್ಬುರ್ಗಿ, ಎಸ್.ಆರ್.ಶಾಸ್ತ್ರೀ, ಡಾ.ಸಂಗಮೇಶ ಸವದತ್ತಿಮಠ, ಡಾ.ಪಂಚಾಕ್ಷರಿ ಹಿರೇಮಠ, ಡಾ.ಎಸ್.ಎಂ.ಹಿರೇಮಠ, ಡಾ.ಮೀನಾಕ್ಷಿ ಬಾಳಿ, ಡಾ.ಬಿ.ಆರ್.ಹಿರೇಮಠ, ಡಾ.ಎಸ್.ವಿದ್ಯಾಶಂಕರ, ಡಾ.ಬಿ.ವಿ.ಮಲ್ಲಾಪುರ, ಗೋಪಿಕಾದೇವಿ ದೇಶಮುಖ, ಆಚಾರ್ಯ ನಂದೀಶ ಸೊಲ್ಲಾಪುರ, ಡಾ.ವೀರಣ್ಣ ರಾಜೂರ, ಮಲ್ಲಿನಾಥ ಹಿರೇಮಠ, ಎಚ್.ಕಾಶಿನಾಥರೆಡ್ಡಿ, ರಮೇಶಬಾಬು ಯಾಳಗಿ, ಷಣ್ಮುಖಯ್ಯ ಅಕ್ಕೂರಮಠ, ಡಾ.ಜಿ.ಎಂ.ನಾಗಯ್ಯ, ಡಾ.ಸಿ.ನಾಗಭೂಷಣ, ಡಾ.ಸೋಮನಾಥ ಯಾಳವಾರ, ಡಾ.ಶಾಂತಾ ಇಮ್ರಾಪುರ, ಬಸವರಾಜ ಪುರಾಣಿಕ, ಡಾ.ಸಿ.ಪಿ.ಕೆ, ಪ್ರೋ.ವೀರೇಂದ್ರ ಸಿಂಪಿ, ಡಾ.ಜಿ.ಬಿ.ವಿಸಾಜಿ ಭಾಲ್ಕಿ, ಡಾ.ಎ.ಸಿ.ವಾಲಿ, ಡಾ.ಮಲ್ಲಿಕಾರ್ಜುನ ಪರಡ್ಡಿ, ಎಲ್ಬಿಕೆ ಅಲ್ದಾಳ, ಡಾ.ಟಿ.ಎಂ.ಭಾಸ್ಕರ, ಡಾ.ಎಂ.ಜಿ.ನಾಗರಾಜ, ಡಾ.ಶಿವಕುಮಾರ ಸ್ವಾಮಿ, ರೇವಣಸಿದ್ಧಯ್ಯ ರುದ್ರಸ್ವಾಮಿಮಠ, ಡಾ.ಸಂಗಮೇಶ ಹಂಡಗಿ ಮುಂತಾದವರ 40 ಕ್ಕೂ ಹೆಚ್ಚಿನ ಗ್ರಂಥಗಳನ್ನು ಪ್ರಕಟಿಸಲಾಗಿದೆ.
ಆದರೆ, ಇದರಲ್ಲಿ ಅಭಿನಂದನಾ ಗ್ರಂಥ ಮಾತ್ರ ಎಲ್ಬಿಕೆ ಅಲ್ದಾಳ ಅವರೊಬ್ಬರದೇ ಆಗಿದೆ. `ರಂಗಸಂತ ಜಂಗಮ' ಎಂಬ ವೈಶಿಷ್ಟ್ಯಪೂರ್ಣ ಮತ್ತು ಅರ್ಥಪೂರ್ಣವಾದ, ಮಹತ್ವದ ಅಭಿನಂದನಾ ಗ್ರಂಥ ಪ್ರಕಟಿಸಿ ರಂಗಕರ್ಮಿ ಅಲ್ದಾಳ ಅವರಿಗೆ ಮಠಾಧೀಶ ಚೆನ್ನವೀರ ಶಿವಾಚಾರ್ಯರು ಎಲ್ಲರಕ್ಕಿಂತ ಹೆಚ್ಚಿನ ಗೌರವ ಕೊಟ್ಟಿದ್ದಾರೆ. ಹೇಗೆ ಅಲ್ದಾಳರು ಸಹ ಮುಸ್ಲಿಂನಾದರೂ ತಮ್ಮ ಧರ್ಮದ ಕಟ್ಟುಪಾಡುಗಳನ್ನು ಮೀರಿ ಶರಣರ ಚರಿತ್ರೆಗಳನ್ನು ನಾಟಕವಾಗಿಸಿ ಅದರಲ್ಲೇ ಜೀವನ ಸಂತೃಪ್ತಿ ಕಂಡಿದ್ದಾರೋ, ಹಾಗೆಯೇ, ಹಾರಕೂಡ ಮಠ ಕೂಡ ಜಾತಿ ಮತದ ಎಲ್ಲೆಯನ್ನು ಮೀರಿ ಒಬ್ಬ ಉತ್ತಮ ಕಲಾವಿದನನ್ನು ಗೌರವಿಸಿದೆ ಎನ್ನಬಹುದು.
-----------